ನಿಪ್ಪಾಣಿ: ಒಂದೇ ದಿನ ಮೂರು ಮನೆಗಳ ಕಳ್ಳತನ ಮಾಡಿ ಮನೆಯಲ್ಲಿದ್ದ ನಗದು ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆಸಿದೆ.

ಮಂಗಳವಾ ರಾತ್ರಿ ಸುರಿದ ಭಾರೀ ಮಳೆಯಿಂದ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಇದರ ಲಾಭ ಪಡೆದ ಕದೀಮರು ಮೂರು ಮನೆಗಳಿಗೆ ಕನ್ನ ಹಾಕಿದ್ದಾರೆ.

ಪಟ್ಟಣದ ಕುರುಬರ ಓಣಿ, ವಡ್ಡರ ಓಣಿ ಮತ್ತು ಕುರುಂದವಾಡ ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ. ನಗದು, ಚಿನ್ನ ಮತ್ತು ಬೆಳ್ಳಿ ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ತಾಯವ್ವ ಬನ್ನೆ ಎಂಬುವರ ಮನೆಯಿಂದ 12 ಸಾವಿರ ನಗದು ಹಣ ಮತ್ತು ನಾಲ್ಕು ತಾಮ್ರದ ಕೊಡ, ಕುರುಂದವಾಡ ರಸ್ತೆಯಲ್ಲಿರುವ ವಸಂತ್ ಖೋತ ಅವರ ಮನೆಯಲ್ಲಿದ್ದ 10 ಗ್ರಾಂ ಚಿನ್ನದ ಸರ ಮತ್ತು 2 ಸಾವಿರ ರೂ ನಗದು ಹಣ ಹಾಗೂ ರಾಮಚಂದ್ರ ಪವಾರ ಎಂಬುವರ ಮನೆಯಲ್ಲಿಟ್ಟಿದ್ದ 2 ಗ್ರಾಂ ಚಿನ್ನ ಮತ್ತು 14 ಗ್ರಾಮ ಬೆಳ್ಳಿಯನ್ನ ಕಳ್ಳರು ಎಗರಿಸಿದ್ದಾರೆ.

ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ತನಿಖೆ ಕೈಗೊಂಡಿದ್ದಾರೆ.