ಚಿಕ್ಕೋಡಿ: ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಡಾ. ಪ್ರಭಾಕರ ಕೋರೆ ಅವರ ಒಡೆತನದ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಹಾಗೂ ಕೆಎಲ್ ಇ ಸಂಸ್ಥೆಯ ಎಸ್ ಸಿ ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಿರಿಯ ನಟ ರವಿಚಂದ್ರನ್, ಡಾಲಿ ಧನಂಜಯ, ಮಂಡ್ಯ ರಮೇಶ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ನಟಿಯರಾದ ಅಮುಲ್ಯ, ಅನು ಪ್ರಭಾಕರ, ಸಪ್ತಮಿ ಗೌಡ ಭಾಗಿಯಾದರು.

ಮರೆವಣಿಗೆ ಮೂಲಕ ತೆರೆದ ವಾಹನದಲ್ಲಿ ಆಗಮಿಸಿದ ನಟ ನಟಿಯರನ್ನ ನೋಡಲು ಜನರು ಮುಗಿ ಬಿದ್ದರು. ಉದ್ಘಾಟನೆ ಬಳಿಕ ಮಾತನಾಡಿದ ಹಿರಿಯ ನಟ ರವಿಚಂದ್ರನ್ ಸಂತೋಷ ಎನ್ನುವದು ಇನ್ನೊಬ್ಬರ ಮುಖದಲ್ಲಿ ಕಂಡಾಗ ನಾವೂ ಕೂಡ ಸುಖಿಯಾಗಿರಲು ಸಾಧ್ಯ. ಆದ್ದರಿಂದಲೇ ಡಾ ಪ್ರಭಾಕರ ಕೋರೆ ಅವರು ಎಲ್ಲವನ್ನು ಸಾಧ್ಯವಾಗಿಸಿದ್ದಾರೆ.

ಶಿಕ್ಷಣದ ಜೊತೆಗೆ ಬದುಕು ನೀಡಿ, ಅವರ ಬಾಳಿಗೆ ಬೆಳಕಾಗಿದ್ದಾರೆ. ಎಲ್ಲವೂ ಸಾಧ್ಯವಾದದ್ದು, ಕೋರೆ ಅವರು ಇನ್ನೊಬ್ಬರ ಮುಖದಲ್ಲಿ ನಗು ಕಂಡವರು. ಶಿಕ್ಷಣ, ಬದುಕು ನೀಡಿದ್ದಾರೆ. ನಮ್ಮ ಮನೆ ಪಕ್ಕ ಕೆಎಲ್ ಇ ಕಾಲೇಜು ಇದೆ. ಅತಿಥಿಗಳಿಗೆ ಪ್ರೀತಿ ಎಂದರೆ ಕೋರೆ ಅವರನ್ನು ನೋಡಿ ಕಲಿಬೇಕು. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ದ. ಮನಸ್ಸು ಶುದ್ದವಾಗಿದ್ದರೆ ಎಲ್ಲವೂ ಸ್ವಚ್ಚವಾಗಿರುತ್ತದೆ. ಸಾಧನೆಗಳು ನಿರಂತರವಾಗಿರುತ್ತವೆ. ತಂದೆ ಸಮಾನರಾದ ಡಾ. ಕೋರೆ ಅವರ ಪ್ರೀತಿ ವಾತ್ಸಲ್ಯ ಹಾಗೂ ಅವರ ಸಾಧನೆ ಇಂದಿನ ಜನರಿಗೆ ಪ್ರೇರಣಾದಾಯಿ ಎಂದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಟ್ಟ ಗ್ರಾಮ ಅಂಕಲಿಯ ಚಿತ್ರಣವನ್ನೇ ಕೆಎಲ್ ಇ ಸಂಸ್ಥೆ ಬದಲಾಯಿಸಿದೆ. ಇಂದು ಈ ಚಿತ್ರಮಂದಿರಕ್ಕೆ 50ನೇ ವರ್ಷದ ಸುವರ್ಣ ಸಂಭ್ರಮ ನಿಮಿತ್ತ ಎಲ್ಲ ಕಲಾವಿದ ದಿಗ್ಗಜರನ್ನು ಅಂಕಲಿ ಎಂಬ ಪುಟ್ಟ ಹಳ್ಳಿಗೆ ಕರೆಸಬೇಕು, ನಮ್ಮ ಚಿತ್ರರಂಗ, ಕಲಾರಂಗ ಯಾವಾಗಲೂ ಜೀವಂತವಾಗಿ ಉಳಿಯಬೇಕೆಂಬ ಹಂಬಲದಿಂದ ನಿರಂತರ ಕನ್ನಡ ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಲ್ಲ ಕಡೆ ಚಿತ್ರ ಮಂದಿರಗಳು ಮುಚ್ಚಿವೆ ಆದರೆ ಸಣ್ಣ ಹಳ್ಳಿಯಲ್ಲಿ ಇನ್ನೂ ಚಾಲನೆಯಲ್ಲಿದ್ದು, ಕನ್ನಡ ಉಳಿಯಲು ಕಂಕಣಬದ್ದವಾಗಿದೆ ಎಂದರು.
ನಟ ಡಾಲಿ ಧನಂಜಯ,ಮಂಡ್ಯ ರಮೇಶ, ನಟಿಯರಾದ ಅನುಪ್ರಭಾಕರ, ಅಮೂಲ್ಯಾ, ಸಪ್ತಮಿ ಗೌಡಾ ಅವರು ಮಾತನಾಡಿ ಮಯೂರ್ ಚಿತ್ರಮಂದಿರದ ಕಾರ್ಯವನ್ನ ಶ್ಲಾಘಿಸಿದರು‌.

ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಅವರು ಕನ್ನಡದ ವಿವಿಧ ಹಾಡುಗಳನ್ನು ಹಾಡುವದರ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು.