ಬೆಳಗಾವಿ : ನಿಡಸೋಶಿ ದುರದುಂಡೇಶ್ವರ ಮಠದ ಪಟ್ಟಕ್ಕಾಗಿ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ಗದ್ದುಗೆ ಗುದ್ದಾಟ ಅಂತಿಮ ಹಂತ ತಲುಪಿದ್ದು ಬೆಳಗಾವಿಯಲ್ಲಿ ಹೈ ವೊಲ್ಟೇಜ್ ಮೀಟಿಂಗ್ ನಡೆಯುತ್ತಿದೆ.
ಬೆಳಗಾವಿ ಜಿರಗೆ ಸಭಾ ಭವನದಲ್ಲಿ ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಂಸದ ರಮೇಶ ಕತ್ತಿ, ಲಿಂಗಾಯತ ಸಮಾಜದ ಮುಖಂಡರು ಹಾಗೂ ನಿಡಸೋಶಿ ಗ್ರಾಮದ ಹಿರಿಯರು ಭಾಗಿಯಾಗಿದ್ದಾರೆ.

ಹಿರಿಯ ಶ್ರೀಗಳಾದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳಿಗೆ ಒಂದು ತಿಂಗಳೊಳಗಾಗಿ ಪಟ್ಟಾಭೀಷೇಕ ಮಾಡಿಸಿ ಅಧಿಕಾರ ನೀಡುವ ಭರವಸೆಯೊಂದಿಗೆ ರಾಮಕೃಷ್ಣ ಆಶ್ರಮಕ್ಕೆ ರಾಜೀನಾಮೆ ನೀಡಿಸಿ ಕರೆ ತಂದಿದ್ದು ಈಗ ಅಧಿಕಾರ ಬಿಟ್ಟು ಕೊಡುತ್ತಿಲ್ಲ ಎಂದು ಆಮರಣಾಂತ ಉಪವಾಸವನ್ನ ಕಿರಿಯ ಶ್ರೀಗಳು ಮಾಡುತ್ತಿದ್ದಾರೆ. ಕಿರಿಯ ಶ್ರೀಗಳು ಭಕ್ತರೊಂದಿಗೆ ಬೆರೆಯುತ್ತಿಲ್ಲ. ನನ್ನ ವಿರೋಧ ಮಾಡುತ್ತಿದ್ದಾರೆ ಎಂದು ಹಿರಿಯ ಶ್ರೀಗಳು ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಇಬ್ಬರು ಶ್ರೀ ಗಳ ಆಂತರಿಕ ಜಗಳ ಲಿಂಗಾಯತ ಮುಖಂಡರಿಗೆ ತಲೆ ನೋವಾಗಿದ್ದು ಇದನ್ನ ಶತಾಯ ಗತಾಯ ಬಗೆ ಹರಿಸಬೇಕು ಎಂದು ಇಂದು ಮಹತ್ವದ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಹಲುವು ಬಾರಿ ಸಂಧಾನ ಸಭೆಗಳು ನಡೆದಿದ್ದು ವಿಫಲವಾಗಿವೆ. ಇಂದು ನಡೆಯುವ ಈ ಮಹತ್ವದ ಸಭೆ ಒಂದು ಮಠದ ಏಳ್ಗೆಗಾಗಿ ಒಂದು ನಿರ್ಧಾರಕ್ಕೆ ಬರುತ್ತಾ ಎನ್ನುವದನ್ನ ಕಾಯ್ದು ನೋಡಬೇಕಿದೆ.