ಹುಕ್ಕೇರಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನ ವಿಜೃಂಭಣೆಯಿಂದ ಆಚರಿಸಲಾಯಿತು.

ಸೋಮವಾರದಂದು ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಅಡವಿಸಿದ್ದೇಶ್ವರ ಮಠದಿಂದ ಅಂಬೇಡ್ಕರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ತಾ.ಪಂ ಇಒ ಟಿ.ಆರ್.ಮಲ್ಲಾಡದ ಮೆರವಣಿಗೆಗೆ ಚಾಲನೆ ನೀಡಿದ ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಸವೇಶ್ವರ ವೃತ್ತದ ಅಂಬೇಡ್ಕರ್ ಉದ್ಯಾನವನ ಬಳಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮ ವರೆಗೆ ಆಗಮಿಸಿ ಸಮಾರೋಪಗೊಂಡಿತು.

ಸಮಾರಂಭದಲ್ಲಿ ಸಾಹಿತಿ ಸುಬ್ರಾವ್ ಎಂಟೆತ್ತಿನವರ ಮಾತನಾಡಿ, ನಮ್ಮ ದೇಶಕ್ಕೆ ಸಂವಿಧಾನದಂತ ಶ್ರೇಷ್ಠ ಗ್ರಂಥವನ್ನ ನೀಡಿರುವ ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯಕ್ಕೆ ಅಷ್ಟೇ ಅಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದಾರೆ. ಅವರು ಹಾಕಿಕೊಟ್ಟ ತತ್ವ ಸಿದ್ದಾಂತದ ದಾರಿಯಲ್ಲಿ ನಡೆಯಬೇಕು ಎಂದರು.

ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ ಮಂಜುಳಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಪಿಐ ಮಹಾಂತೇಶ ಬಸಾಪೂರ, ಮುಖಂಡರಾದ ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ರಮೇಶ ಹುಂಜಿ, ಬಸವರಾಜ ತಳವಾರ, ಅಕ್ಷಯ ವೀರಮುಖ, ಕೆಂಪಣ್ಣ ಶಿರಹಟ್ಟಿ, ಸುನೀಲ ಬೈರಣ್ಣವರ, ಪ್ರಮೋದ ಕೂಗೆ, ಕೆ.ವೆಂಕಟೇಶ, ಸದಾಶಿವ ಕಾಂಬಳೆ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ, ಪ್ರಕಾಶ ಮೈಲಾಖೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.