ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ನಿನ್ನೆ ಮಳೆರಾಯ ಕೊಂಚ ತಗ್ಗಿರುವ ಕಾರಣ ಕೃಷ್ಣಾ ನದಿ ನೀರಿನ ಒಳ ಹರಿವು ಯಥಾ ಸ್ಥಿತಿ ಕಾಯ್ದುಕೊಂಡಿದೆ.

ದೂದಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಮಟ್ಟದಲ್ಲೂ ಸ್ಥಿರವಾಗಿದೆ. ಒಟ್ಟು ಕೃಷ್ಣಾ ನದಿಗೆ 33910 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕೆಳ ಹಂತದ 6 ಸೇತುವೆಗಳ ಜಲಾವೃತ ಯಥಾ ಸ್ಥಿತಿ ಮುಂದುವರೆದಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರ, ಸೌಂದತ್ತಿ – ಮಾಂಜರಿ , ದೂದಗಂಗಾ ನದಿಗೆ ಅಡ್ಡಲಾಗಿರುವ ಮಲ್ಲಿಕವಾಡ – ದತ್ತವಾಡ, ವೇದಗಂಗಾ ನದಿಗೆ ಅಡ್ಡಲಾಗಿರುವ ಅಕ್ಕೋಳ – ಸಿದ್ನಾಳ, ಸಿದ್ನಾಳ – ಕುನ್ನೂರು, ಕುನ್ನೂರ – ಭಾರವಾಡ ಸೇತುವೆಗಳು ಜಲಾವೃತವಾಗಿವೆ.


ಬ್ಯಾರಿಕೆಡ್ ಹಾಕಿ ಸೇತುವೆಗಳ ಮೇಲಿನ ಸಂಚಾರವನ್ನ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ಮಾಡುತ್ತಿದ್ದಾರೆ. ಸೇತುವೆ ಮುಳುಗಡೆಯಾದರೂ ಚಿಕ್ಕಮಕ್ಕಳೊಂದಿಗೆ ಆಗಮಿಸಿ ಜನರು ಜಲಾವೃತಗೊಂಡ ಸೇತುವೆಗಳ ಮೇಲೆ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದಾರೆ.
