ಬೈಲಹೊಂಗಲ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ರೂಪಾ ಚನಗೌಡ ಪಾಟೀಲ್ 625 ಕ್ಕೆ 625 ಅಂಕ ಪಡೆದು ಇಡೀ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ಹಿನ್ನಲೆ ವಿಧ್ಯಾರ್ಥಿನಿ ಮನೆಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಭೇಟಿ ನೀಡಿ ಆಶೀರ್ವದಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ಗ್ರಾಮೀಣ ಪ್ರದೇಶದ ಪ್ರತಿಭೆ ಇಂದು SSLC ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲು ಬಂದಿರೋದು ಅತೀವ ಸಂತೋಷ ತಂದಿದೆ. ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದವರೂ ಕೂಡ ಸಾಧಿಸಬಹುದು ಎಂಬುವುದಕ್ಕೆ ಉದಾಹರಣೆ ಇದು. ಅದಕ್ಕಾಗಿ ನಾವೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿ ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಹುದು ಎಂಬುವುದಕ್ಕೆ ರೂಪಾ ಅವರು ಮಾದರಿ ಆಗಿದ್ದಾರೆ. ವಿದ್ಯಾರ್ಥಿನಿಗೆ ಒಳಿತಾಗಲಿ ಎಂದು ಆಶೀರ್ವದಿಸಿದರು.
ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ರೂಪಾ ಪಾಟೀಲ್, ಇಂದು ನಮ್ಮ ಮನೆಗೆ ನಮ್ಮ ಗುರುಗಳು ಬಂದು ಆಶೀರ್ವಾದ ಮಾಡಿದ್ದಾರೆ. ಇದು ನನ್ನ ಭಾಗ್ಯ. ನನ್ನ ಬದುಕಿನೊಳಗೆ ಇದೊಂದು ಅವಿಸ್ಮರಣೀಯ ದಿನ. ಗುರುಗಳ ಅಂತಃಕರಣ ಎಷ್ಟು ದೊಡ್ಡದು ಅಂದ್ರೆ ಭಕ್ತರನ್ನು ತಮ್ಮ ಮಕ್ಕಳಂತೆ ನೋಡುತ್ತಾರೆ. ಇಂತಹ ಮಹಾನ್ ಶ್ರೀಗಳು ಇಂದು ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಈ ವೇಳೆ ಶ್ರೀಗಳು ಮನೆಗೆ ಆಗಮಿಸುತ್ತಿದ್ದಂತೆ ರೂಪಾ ಚನಗೌಡ ಪಾಟೀಲ್ ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ಸಂಧರ್ಭದಲ್ಲಿ ಬೈಲಹೊಂಗಲದ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಮುಜರಾಯಿ ಇಲಾಖೆಯ ನಿರ್ದೇಶಕರಾದ ಡಾ. ಮಹಾಂತೇಶ್ ಶಾಸ್ತ್ರೀ, MK ಹುಬ್ಬಳ್ಳಿ ಅಕ್ಷರದಾಸೋಹದ ಮಂಜುನಾಥ್ ಅಳವಣೆ ಅವರು ಉಪಸ್ಥಿತರಿದ್ದರು.