ಹುಕ್ಕೇರಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಡ್ಡಿ, ಮಣಗುತ್ತಿ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ದಡ್ಡಿ ಹಾಗೂ ಮಣಗುತ್ತಿ ಗ್ರಾಮಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಭಾಗದ ಅರಣ್ಯ ಪ್ರದೇಶದಿಂದ ಪದೇ ಪದೇ ಈ ಆನೆ ಗ್ರಾಮದ ಕಡೆಗೆ ಆಗಮಿಸುತ್ತಿದೆ. ಇಂದು ರಸ್ತೆಯಲ್ಲೇ ರಾಜ ಗಾಂಭೀರ್ಯವಾಗಿ ನಡೆಕೊಂಡು ಬರುವುದನ್ನ ಕಂಡ ಜನರು ಭಯಭೀತರಾಗಿದ್ದಾರೆ.

ಆಹಾರ ಅರಸಿ ಗ್ರಾಮದ ಕಡೆ ಆಗಮಿಸುತ್ತಿರುವ ಆನೆ ರೈತರ ಜಮೀನುಗಳಿಗೆ ನುಗ್ಗಿ ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನ ನಾಶ ಮಾಡುತ್ತುದ್ದು, ಒಬ್ಬೋಬ್ಬರೆ ಓಡಾಡಲು ಗ್ರಾಮಸ್ಥರು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಆನೆಯನ್ನ ಅರಣ್ಯದ ಕಡೆಗೆ ಅಟ್ಟಿದ್ದಾರೆ.

ಈ ಆನೆ ಮೇಲಿಂದ ಮೇಲೆ ಗ್ರಾಮದಲ್ಲಿ ಆಗಮಿಸುತ್ತಿರುವುದರಿಂದ ಸಾರ್ವಜನಿಕರು ಭಯದಲ್ಲೇ ಇದ್ದು, ಆನೆ ಗ್ರಾಮದ ಕಡೆ ಬರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.