ಬೆಳಗಾವಿ : ನಿಡಸೋಶಿ ದುರದುಂಡೇಶ್ವರ ಮಠದ ಪಟ್ಟಕ್ಕಾಗಿ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ತಿಕ್ಕಾಟಕ್ಕೆ ಇತೀಶ್ರೀ ಹಾಡಲು ಲಿಂಗಾಯತ ಸಮಾಜದ ಮುಖಂಡರು ಮುಂದಾಗಿದ್ದಾರೆ.
ಬೆಳಗಾವಿ ಜಿರಗೆ ಸಭಾ ಭವನದಲ್ಲಿ ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ನಡೆದ ಸಭೆ ಯಾವುದೇ ನಿರ್ಣಯಕ್ಕೆ ಬರದೇ ನಿರಾಸೆ ಮೂಡಿಸಿದೆ.
ಸಭೆಯ ಬಳಿಕ ಕಿರಿಯ ಶ್ರೀಗಳ ಆಮರಣಾಂತ ಉಪವಾಸ ಬಿಡಿಸಲು ಎಲ್ಲ ಮುಖಂಡರು ತೀರ್ಮಾನಿಸಿ ನಿಡಸೋಶಿ ದುರುದುಂಡೇಶ್ವರ ಮಠದತ್ತ ಧಾವಿಸಿದ್ದಾರೆ ಕೆಲವೇ ಕ್ಷಣಗಳಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ಎ ಬಿ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ ಸೇರಿದಂತೆ ಎಲ್ಲ ಮುಖಂಡರು ದುರದುಂಡೇಶ್ವರ ಮಠದತ್ತ ಆಗಮಿಸಿದ್ದಾರೆ.
ಹಿರಿಯ ಶ್ರೀಗಳಾದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳಿಗೆ ಒಂದು ತಿಂಗಳೊಳಗಾಗಿ ಪಟ್ಟಾಭೀಷೇಕ ಮಾಡಿಸಿ ಅಧಿಕಾರ ನೀಡುವ ಭರವಸೆಯೊಂದಿಗೆ ರಾಮಕೃಷ್ಣ ಆಶ್ರಮಕ್ಕೆ ರಾಜೀನಾಮೆ ನೀಡಿಸಿ ಕರೆ ತಂದಿದ್ದು ಈಗ ಅಧಿಕಾರ ಬಿಟ್ಟು ಕೊಡುತ್ತಿಲ್ಲ ಎಂದು ಆಮರಣಾಂತ ಉಪವಾಸವನ್ನ ಕಿರಿಯ ಶ್ರೀಗಳು ಮಾಡುತ್ತಿದ್ದಾರೆ. ಕಿರಿಯ ಶ್ರೀಗಳು ಭಕ್ತರೊಂದಿಗೆ ಬೆರೆಯುತ್ತಿಲ್ಲ. ನನ್ನ ವಿರೋಧ ಮಾಡುತ್ತಿದ್ದಾರೆ ಎಂದು ಹಿರಿಯ ಶ್ರೀಗಳು ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಇಬ್ಬರು ಶ್ರೀ ಗಳ ಆಂತರಿಕ ಜಗಳ ಲಿಂಗಾಯತ ಮುಖಂಡರಿಗೆ ತಲೆ ನೋವಾಗಿದೆ.