ಬೆಳಗಾವಿ: ಅಂಬೇಡ್ಕರ್ ಜಯಂತಿ ನಿಮಿತ್ಯವಾಗಿ ನಡೆದ ಮೆರವಣಿಗೆಯಲ್ಲಿ ಡಾಲ್ಬಿಸೌಂಡ್ ಸಿಸ್ಟಮ್ ಉರುಳಿ ಬಿದ್ದಿರುವ ಘಟನೆ ಬೆಳಗಾವಿ ತಾಲೂಕಿನ ಕಡೋಲಿಯಲ್ಲಿ ನಡೆದಿದೆ.
ಕಡೋಲಿ ಗ್ರಾಮದ ಭರತ್ ಸಂಭಾಜಿ ಕಾಂಬಳೆ (22) ಹಾಗೂ ರೋಹಿಲ್ ಮ್ಯಾಗೇರಿಗೆ (28) ಸಣ್ಣಪುಟ್ಟ ಗಾಯಗಳಾಗಿವೆ. ಕಡೋಲಿ ಗ್ರಾಮದಿಂದ ಬೆಳಗಾವಿಯತ್ತ ಮರೆವಣಿಗೆ ಬರುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಮಾವಿನ ಮರಕ್ಕೆ ಡಾಲ್ಬಿ ಸೌಂಡ್ ತಾಗಿ ಟ್ರಾಲಿ ಸಂಪೂರ್ಣವಾಗಿ ಉರುಳಿದೆ. ಪಕ್ಕದಲ್ಲೇ ನಡೆದುಕೊಂಡು ಬರುತ್ತಿದ್ದ ಭರತ್ ಹಾಗೂ ರೋಹಿಲ್ ಮೇಲೆ ಬೃಹತ್ ಗಾತ್ರದ ಸೌಂಡ್ ಸಿಸ್ಟಮ್ ಟ್ರಾಲಿ ಬಿದ್ದಿದೆ.
ಟ್ರಾಲಿ ಬೀಳುತ್ತಿದ್ದಂತೆ ಸ್ಥಳೀಯರು ಟ್ರಾಲಿಯ ಕೆಳಗೆ ಸಿಲುಕಿದ್ದ ಭರತ್ ಹಾಗೂ ರೋಹಿಲ್ ನನ್ನು ರಕ್ಷಣೆ ಮಾಡಿದ್ದಾರೆ. ಟ್ರಾಲಿ ಮೈಮೇಲೆ ಬಿದ್ದ ಪರಿಣಾಮ ಭರತ್ ಗೆ ಗಂಭೀರ ಗಾಯಗಳಾಗಿದ್ದರೆ ರೋಹಿಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಿಂದ ಅಂಬೇಡ್ಕರ ಜಯಂತಿಯ ನಿಮಿತ್ಯವಾಗಿ ಡಾಲ್ಬಿ ಸೌಂಡ್ ಸಿಸ್ಟಮ್ ತರಿಸಲಾಗಿತ್ತು. ಆಕಸ್ಮಿಕ ಘಟನೆಯಿಂದ ಮೆರವಣಿಗೆಯ ರಂಗು ಕಳೆಗುಂದಿದ್ದು ಸ್ಥಳಕ್ಕೆ ಕಾಕತಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.