ನಿಪ್ಪಾಣಿ: ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರಕ್ಕೆ ಆಗಮಿಸಿ 100 ವರ್ಷ ಪೂರೈಕೆ ಆಗಿರುವ ಸವಿ ನೆನಪಿನ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಅಂಬೇಡ್ಕರ ಅವರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎನ್ ಮಹೇಶ ಹೇಳಿದರು.
ನಿಪ್ಪಾಣಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿ ಮುಖಂಡ ಎನ್ ಮಹೇಶ ಸುದ್ದಿಗೋಷ್ಠಿ ನಡೆಸಿ, ನಿಪ್ಪಾಣಿ ನಗರಕ್ಕೆ ಅಂಬೇಡ್ಕರ ಬಂದು ಹೋಗಿ ನೂರು ವರ್ಷ ಪೂರ್ಣಗೊಂಡಿವೆ. ಈ ಸವಿ ನೆನಪಿಗಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಬಿಜೆಪಿಯಿಂದ ಎಪ್ರಿಲ್ 15 ರಂದು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಎಪ್ರಿಲ್ 11 ರಂದು ಬೆಂಗಳೂರಿನಿಂದ ರಥ ಯಾತ್ರೆಗೆ ಚಾಲನೆ ನೀಡಲಾಗುವದು. ರಥಯಾತ್ರೆ ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಎಪ್ರಿಲ್ 15 ರಂದು ನಿಪ್ಪಾಣಿ ತಲುಪಲಿದ್ದು ಅದೇ ದಿನ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಡಾ.ಅಂಬೇಡ್ಕರ ಅವರಿಗೆ ಅವಮಾನ ಮಾಡಲಾಗಿದೆ. ಡಾ. ಅಂಬೇಡ್ಕರ ನಿಪ್ಪಾಣಿಗೆ ಬಂದು 100 ವರ್ಷದ ಕಾರ್ಯಕ್ರಮ ಮಾಡುವಂತೆ ಸರಕಾರಕ್ಕೆ ಮನವಿಯನ್ನ ಶಾಸಕಿ ಶಶಿಕಲಾ ಜೊಲ್ಲೆ ಅಧಿವೇಶನದಲ್ಲಿ ಮಾಡಿದ್ದರು. ಆದರೆ ಸರಕಾರ ಮಾತ್ರ ಪ್ರಸ್ತಾವನೆ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಶತಮಾನೋತ್ಸವ ಕಾರ್ಯಕ್ರಮ ಮಾಡಲು ಸರಕಾರ ನಿರ್ಲಕ್ಷ ಧೋರಣೆ ತೋರಿದೆ.
ಬಿಜೆಪಿ ದಲಿತ ವಿರೋಧಿ ಎನ್ನುವ ವಿಷ ಬೀಜವನ್ನ ಕಾಂಗ್ರೆಸ್ ನವರು ಬಿತ್ತಿದ್ದಾರೆ. ಬಿಜೆಪಿ ಸಂವಿಧಾನ ಹಾಗೂ ಅಂಬೇಡ್ಕರ ವಿರೋಧಿ ಅಲ್ಲ ಎನ್ನುವದನ್ನ ಸಮಾವೇಶದಲ್ಲಿ ಸಾಬೀತು ಮಾಡುತ್ತೇವೆ ಎಂದು ನಿಪ್ಪಾಣಿಯಲ್ಲಿ ಬಿಜೆಪಿ ಮುಖಂಡ ಎನ್ ಮಹೇಶ ಹೇಳಿದರು.