
ಬಕ್ರೀದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈದ್-ಉಲ್-ಅಧಾ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಮಹತ್ವ, ಇದರ ಹಿಂದಿನ ಇತಿಹಾಸವೇನು ಎಂಬುದು ಇಲ್ಲಿದೆ…
ಬಕ್ರೀದ್, ಮುಸ್ಲಿಮ್ ಸಮುದಾಯದ ಚಾರಿತ್ರಿಕ ಹಬ್ಬ. ಪ್ರವಾದಿ ಇಬ್ರಾಹಿಮರು ದೈವಾಜ್ಞೆಯಂತೆ ನಿರ್ವಹಿಸಿದ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬ ಇದಾಗಿದೆ. ತ್ಯಾಗ ತನ್ನ ಸುಂದರ ಅರ್ಥವ್ಯಾಪ್ತಿಯೊಂದಿಗೆ ಬದುಕಿ ಗಿಳಿದಾಗ, ಮಾನವನ ಜೀವನದಲ್ಲಿ ಸುಭಿಕ್ಷೆಯೂ, ನೆಮ್ಮದಿಯೂ ಸಾಧ್ಯವಾಗುತ್ತದೆ. ಅಲ್ಲಾಹನ ಅಪೂರ್ವ ಸತ್ಯಪರೀಕ್ಷೆಯಲ್ಲಿ ಕೊನೆಗೂ ಜಯಿಸಿ ಬಂದ ಪ್ರವಾದಿ ಇಬ್ರಾಹಿಮರ ತ್ಯಾಗ, ನಿಷ್ಠೆ, ಜಗತ್ತಿನ ಮಾನವಕೋಟಿಯ ಬದುಕಿಗೆ ಸ್ಫೂರ್ತಿ ದಾಯಕವಾಗಿದೆ.

ಪ್ರವಾದಿ ಇಬ್ರಾಹಿಂರು ಇರಾಕ್ ದೇಶದಲ್ಲಿ ಜನಿಸಿದರು. ಅವರ ತಂದೆ ಮೂರ್ತಿಗಳನ್ನು ತಯಾರಿಸಿ ಮಾರುವ ಪ್ರಖ್ಯಾತ ಉದ್ಯೋಗಿಯಾಗಿದ್ದರು. ನಮ್ಮೂದ್ ಎಂಬ ರಾಜನ ಆಸ್ಥಾನದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದರು. ತನ್ನ ಮುಂದೆಯೇ ತಯಾರಾಗುತ್ತಿದ್ದ ವಿವಿಧ ಮೂರ್ತಿಗಳನ್ನು ಕಂಡು ಇಬ್ರಾಹಿಂರು ಆಕ್ಷೇಪಿಸಿದ್ದರು, ಆಗ ತಂದೆಯು ನೀನು ನನ್ನ ನಂತರ ನನ್ನ ಈ ಸ್ವತ್ತು ಸಂಪತ್ತು, ಐಶ್ವರ್ಯಗಳ ಒಡೆಯನಾಗಲಾರೆಯೋ ಎಂದು ಪ್ರವಾದಿ ಇಬ್ರಾಹಿಂ ಅವರನ್ನು ಹೊರಗೆ ಕಳುಹಿಸುತ್ತಾರೆ. ಏಕದೇವೋಪಾಸನೆಗಾಗಿ ಸಮಸ್ತ ಐಶ್ವರ್ಯವನ್ನು ಹಜರತ್ ಇಬ್ರಾಹಿಂರು ತ್ಯಾಗ ಮಾಡುತ್ತಾರೆ, ಏಕದೇವೋಪಾಸನೆಯ ಕರೆಯನ್ನು ಮೊಳಗಿಸುತ್ತಾ ಸಾಗುತ್ತಾರೆ. ಹೀಗಾಗಿ ಬಾಲ್ಯದಲ್ಲಿಯೇ ಹಜರತ್ ಇಬ್ರಾಹಿಂರು ವೈಚಾರಿಕತೆಗೆ ಸಾಕ್ಷಿಯಾಗಿದ್ದರು.

ಒಮ್ಮೆ ಪ್ರವಾದಿ ಇಬ್ರಾಹಿಮರ ಇಬ್ಬರು ಪತ್ನಿಯಂದಿರಲ್ಲಿ ವಿರಸ ತಲೆದೋರಲು, ಎಳೆ ಹಸುಳೆ ಇಸ್ಮಾಯಿಲರನ್ನೂ, ಪತ್ನಿ ಹಾಜಿರಾರನ್ನೂ ದೂರದ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬರುವಂತೆ ದೈವಾಜ್ಞೆಯಾಯಿತು. ಸತಿ-ಸುತರ ಮೇಲಿನ ಪ್ರೀತಿ-ವಾತ್ಸಲ್ಯ ಒಂದೆಡೆ! ದೈವಾಜ್ಞೆಯನ್ನು ಪಾಲಿಸಬೇಕಾದ ಕರ್ತವ್ಯಪ್ರಜ್ಞೆ ಮತ್ತೂಂದೆಡೆ! ಪ್ರವಾದಿ ಇಬ್ರಾಹಿಮರು ಮಾತ್ರ ಈ ದುರಂತಕ್ಕೆ ಎಳ್ಳಷ್ಟೂ ದುಃಖೀಸದೆ, ದೈವಾ ಜ್ಞೆಯನ್ನು ಶಿರಸಾ ವಹಿಸುವ ಕರ್ತವ್ಯ ದೃಷ್ಟಿಯಿಂದ, ತತ್ಕ್ಷಣ ಬೀವಿ ಹಾಜಿರಾರನ್ನೂ, ಎಳೆ ಹಸುಳೆ ಇಸ್ಮಾಯಿಲರನ್ನೂ ಮರುಭೂಮಿಯ ದೂರದ ನಿರ್ಜನ ಪ್ರದೇಶವೊಂದರಲ್ಲಿ ಬಿಟ್ಟು ಬಂದು ದೈವಾಜ್ಞೆಯನ್ನು ನೆರವೇರಿಸಿದರು.

ಬಕ್ರೀದ್ ಆಚರಣೆಗೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮೆಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ ಪ್ರಿಯರು ಯಾರು ಎಂದು ಕೇಳಿದಾಗ, ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೆಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ.
ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ಧಗೊಳ್ಳುತ್ತಾನೆ. ಆದರೆ ಇಬ್ರಾಹಿಂ(ಸ) ಅವರಿಗೆ ಮಗನನ್ನು ಬಲಿ ಕೊಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಪಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಕತ್ತಿ ಬೀಸಲು ಸಿದ್ಧರಾಗುತ್ತಾರೆ.

ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಇದೇ ಕಥೆಯನ್ನು ಹಲವರು ತಮ್ಮದೇ ಶೈಲಿಯಲ್ಲಿ ಭಿನ್ನ ಭಿನ್ನವಾಗಿ ಹೇಳುತ್ತಾರೆ.
ಪ್ರವಾದಿ ಇಬ್ರಾಹಿಮರು ಈ ಅಭೂತಪೂರ್ವ ಸತ್ವ ಪರೀಕ್ಷೆಯಲ್ಲಿ ಜಯಿಸಿ, “ಖಲೀಲುಲ್ಲಾ’ ಎಂದು ಅಲ್ಲಾಹ ನಿಂದ ಸಂಬೋಧಿಸಲ್ಪಟ್ಟಿತು. ಪ್ರವಾದಿ
ಇಬ್ರಾಹಿಮರ ಪುತ್ರ ಬಲಿದಾನದ ನೆನಪನ್ನು ಶಾಶ್ವತ ವಾಗಿರಿಸಲು ಬಕ್ರೀದಿನಂದು ಪ್ರಾಣಿ ಬಲಿ ನೀಡುವ (ಕುರ್ಬಾನಿ) ಪದ್ಧತಿಯಿದ್ದು, ಪ್ರಾಣಿ ಬಲಿ ಎಂಬುದು ಕೇವಲ ಸಾಂಕೇತಿಕವಾಗಿದೆ. ಇಂದು ಪ್ರಾಣಿ ಬಲಿ
ನೀಡಲು ಸಿದ್ಧರಾದವರು, ಮುಂದೆ ತಮ್ಮ ಜೀವನದಲ್ಲಿ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂಬುದೇ ಈ ಬಲಿದಾನದ ಸಂದೇಶ. ಕರ್ತವ್ಯದ ಮುಂದೆ ತಡೆಯಾಗಿ ಬರುವ ಸರ್ವ ಪ್ರಾಪಂಚಿಕ ಮೋಹಗಳ ವಿರುದ್ಧ ನಡೆಸಿದ ಸತ್ವ ಪರೀಕ್ಷೆಯಾಗಿದೆ.

ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದ್ನ ಇತಿಹಾಸ ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಆದರ್ಶ ಧೈಯಗಳೊಂದಿಗೆ, ಇಂದು ಬಕ್ರೀದ ಹಬ್ಬವನ್ನು ವಿಶ್ವದಾದ್ಯಂತ ಮುಸ್ಲಿಮರೆಲ್ಲರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
ಹಜ್ ಯಾತ್ರೆಯ ಪವಿತ್ರ ಬಕ್ರೀದ್
ಬಕ್ರೀದ್ ಹಬ್ಬ ಎಂದರೆ ಹಜ್ ಯಾತ್ರೆಯ ಸಂಭ್ರಮ. ಈ ಹಬ್ಬದ ಶುಭ ಸಂದರ್ಭದಲ್ಲಿಯೇ ಹಜ್ ಯಾತ್ರೆ ಭಕ್ತಿ ವೈಭವದಿಂಧ ನಡೆಯುತ್ತದೆ. ಆರೋಗ್ಯ ಹಾಗೂ ಆರ್ಥಿಕವಾಗಿ ಯೋಗ್ಯನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಮುಸ್ಲಿಮರು ವರ್ಷಕ್ಕೊಮ್ಮೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೆಕ್ಕಾದಲ್ಲಿ ಒಟ್ಟುಗೂಡುತ್ತಾರೆ, ಬಡವ, ಬಲ್ಲಿದ, ರಾಜ, ಮಂತ್ರಿ, ಸಚಿವ ಎಂಬ ಯಾವ ಬೇಧವೂ ಅಲ್ಲಿಲ್ಲ, ಅಲ್ಲಿ ಕೇವಲ ಎರಡು ತುಂಡು ಶುಭ್ರವಾದ ಶ್ವೇತ ಬಟ್ಟೆ (ಪವಿತ್ರ ಎಹರಾಮ್) ಧರಿಸಿ ಹಜ್ ಧಾರ್ಮಿಕ ವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ.
