ಹೊಸಪೇಟೆ: ಈ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೂ ಈ ಪಂಚ ಗ್ಯಾರಂಟಿಗಳನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸ್ಪಷ್ಟ ಪಡಿಸಿದ್ದಾರೆ.

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ “ಪ್ರಗತಿಯತ್ತ ಕರ್ನಾಟಕ- ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಇದೀಗ ಆರನೇಯದ್ದಾದ ಈ ಭೂ ಗ್ಯಾರಂಟಿಯನ್ನು ಕೊಟ್ಟು ಐತಿಹಾಸಿಕ ಕಾರ್ಯಕ್ರವನ್ನು ಮಾಡಿ ಇತಿಹಾಸದ ಪುಟಕ್ಕೆ ಕಾಂಗ್ರೆಸ್‌ ಪಕ್ಷ ಸೇರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವವರಿಗೆ ಪಂಚ ಗ್ಯಾರಂಟಿ ಯೋಜನೆ ಮುಂದು ವರೆಯುತ್ತವೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆಯವರು ಆದೇಶವನ್ನು ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಎರಡು ವರ್ಷದ ಹಿಂದೆ ನನ್ನ, ಸಿದ್ದರಾಮಯ್ಯ ಹಾಗೂ ನಮ್ಮ ಪಕ್ಷದ ನಾಯಕರುಗಳ ಮೇಲೆ ವಿಶ್ವಾಸವನ್ನಿಟ್ಟು, ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ, ರಾಹುಲ್‌ ಗಾಂಧಿಯವರ ನಾಯಕತ್ವದಲ್ಲಿ 136 ಸೀಟನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳಿಸಿ ನಿಮ್ಮ ಋಣವನ್ನು ತೀರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ನಮ್ಮ ಗ್ರಾಮೀಣ ಪ್ರದೇಶದ ಜನರು ಬಡವರು 50-60 ವರ್ಷದಿಂದ ಭೂಮಿಯಲ್ಲಿ ಆಸ್ತಿ ಪಟ್ಟ ಇಲ್ಲದೇ ಹೋದವರಿಗೆ 6 ನೇ ಗ್ಯಾರಂಟಿಯನ್ನು ಸಚಿವ ಕೃಷ್ಣೇಬೈರೇಗೌಡರ ನೇತೃತ್ವದಲ್ಲಿ ಜಾರಿಗೆ ತರುತ್ತಿದ್ದೇವೆ. ಈಗಾಗಲೇ ನಗರಗಳಲ್ಲೂ ಕೂಡ ನಾನು, ಬೈರತಿ ಸುರೇಶ್‌ ಹಾಗೂ ರಹೀಂ ಖಾನ್‌ ಅವರು ಎಲ್ಲರ ಆಸ್ತಿಗಳನ್ನು ಸರಿ ಮಾಡಿ ಅವರ ಖಾತೆಗಳನ್ನು ಸರಿ ಮಾಡಿ ಅವರ ಸ್ವತ್ತನ್ನು ಅವರಿಗೆ ಕೊಡುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ 7ನೇ ಗ್ಯಾರಂಟಿಯನ್ನು ಕೊಡಲು ನಾವು ಬದ್ಧವಾಗಿದ್ದೇವೆ ಎಂದರು.

ವಿರೋಧ ಪಕ್ಷದವರು ಟೀಕೆಗಳನ್ನು ಮಾಡುತ್ತಿದ್ದಾರೆ.ಆದರೆ ಟೀಕೆಗಳು ಸಾಯುತ್ತವೆ.. ನಮ್ಮ ಕೆಲಸಗಳು ಉಳಿಯುತ್ತವೆ. ಅದಕ್ಕೆ ಈ ಎಲ್ಲಾ ಯೋಜನೆಗಳೇ ಸಾಕ್ಷಿ ಎಂದ ಅವರು, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಗ್ರಾಮೀಣ ಪಥವನ್ನು ನಿರ್ಮಾಣ ಮಾಡಲು ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದರು.