ಹುಕ್ಕೇರಿ: ಮಾಜಿ ಸಚಿವ ಉಮೇಶ ಕತ್ತಿ ಸಾವನ್ನಪ್ಪುವ ಮೊದಲು ಕತ್ತಿ ಕುಟುಂಬ ರಾಜ್ಯದಲ್ಲಿ ತನ್ನದೇ ರಾಜಕೀಯ ಪ್ರಾಭಲ್ಯ ಹೊಂದಿತ್ತು. ಬೆಳಗಾವಿ ಜಿಲ್ಲಾ ರಾಜಕಾರಣವನ್ನ ಸಹಕಾರಿ ರಂಗದ ಮೂಲಕ ಸಂಪೂರ್ಣವಾಗಿ ಹತೋಟಿ ಇಟ್ಟುಕೊಂಡಿದ್ದ ಕತ್ತಿ ಕುಟುಂಬ ಉಮೇಶ ಕತ್ತಿ ನಿಧನದ ನಂತರ ಒಂದೊಂದೆ ಬಲಿಷ್ಠ ರಾಜಕೀಯ ಕೊಂಡಿಗಳನ್ನ ಕಳೆದುಕೊಳ್ಳುತ್ತ ಸಾಗಿದೆ.

ಹೌದು ಮಾಜಿ ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಧ್ವನಿಯಾಗಿದ್ದಲ್ಲಷ್ಟೇ ಅಲ್ಲದೇ ರಾಜ್ಯ ರಾಜಕಾರಣದಲ್ಲಿ ತನ್ನದೇ ವರ್ಚಸ್ಸು ಬೆಳೆಸಿಕೊಂಡಿದ್ದರು. ಆದರೇ ಅವರ ಅಕಾಲಿಕ ನಿಧನದಿಂದ ಕತ್ತಿ ಕುಟುಂಬಕ್ಕೆ ಭಾರಿ ಹೊಡೆತ ಬಿದ್ದಿದೆ. ಅವರ ನಿಧನದ ಬಳಿಕ ಅವರ ಪುತ್ರ ನಿಖೀಲ‌ ಕತ್ತಿ ಶಾಸಕರಾಗಿದ್ದಾರೆ. ದಿ.ಉಮೇಶ ಕತ್ತಿ ಸಹೋಧರ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಸಧ್ಯಕ್ಕೆ ಯಾವುದೇ ಹುದ್ದೆ ಇಲ್ಲ.ಉಮೇಶ ಕತ್ತಿ ನಿಧನದ ನಂತರ ಜಾರಕಿಹೊಳಿ ಸಹೋಧರರು ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿ ರಮೇಶ ಕತ್ತಿ ಬಳಿ ಇದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನ ಕಸಿದುಕೊಂಡಿದ್ದಾರೆ. ಅಲ್ಲದೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟ ಇಷ್ಟಕ್ಕೆ ಮುಗಿಸಿದೇ ಕತ್ತಿ ಕುಟುಂಬದ ಬಳಿ ಇದ್ದ ಸಹಕಾರಿ ರಂಗದ ಒಂದೊಂದೆ ಸಂಸ್ಥೆಗಳನ್ನ ವಶಕ್ಕೆ ಪಡೆಯುತ್ತಾ ಸಾಗಿದ್ದಾರೆ.

ಹುಕ್ಕೇರಿ ಮತಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆ ಗೆಲ್ಲಬೇಕೆಂದರೇ ಸಂಕೇಶ್ವರ ಪಟ್ಟಣದಲ್ಲಿರುವ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿಯಲ್ಲಿರುವ ವಿದ್ಯುತ್ ಸಹಕಾರಿ ಸಂಘ ಅಧೀನದಲ್ಲಿರಬೇಕು. ಇಷ್ಟು ವರ್ಷ ಇದೇ ಸಹಕಾರಿ ರಂಗದ ಶಕ್ತಿಯಿಂದ ಉಮೇಶ ಕತ್ತಿ ಗೆಲ್ಲುತ್ತಿದ್ದರು. ಆದರೆ ಈ‌ ಬಾರಿ ಜಾರಕಿಹೊಳಿ ಸಹೋಧರರು ಹಾಗೂ ಜೊಲ್ಲೆ ಸೇರಿ ಕತ್ತಿ ಹಿಡಿತದಲ್ಲಿದ್ದ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ನಿರ್ದೇಶಕರಿಂದ ಅವಿಶ್ವಾಸ ಮಾಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಈಗ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಕೈ ಹಾಕಿದ್ದು 11 ಜನ ನಿರ್ದೇಶಕರು ಕತ್ತಿ ಕುಟುಂಬದ ವಿರುದ್ಧ ನಿಂತು ಅವಿಶ್ವಾಸ ಮಂಡಿಸಿದ್ದಾರೆ. ಇಷ್ಟು ದಿನ ಕತ್ತಿ ಕುಟುಂಬದಿಂದ ಅಧಿಕಾರ ಅನುಭವಿಸಿದ ಜನರೇ ಕತ್ತಿ ಕುಟುಂಬಕ್ಕೆ ಕೈ ಕೊಟ್ಟಿದ್ದು ಅಚ್ಚರಿಗೆ ಕಾರಣವಾಗಿದೆ.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣವನ್ನೇ ಅಲುಗಾಡಿಸಯತ್ತಿದ್ದ ಕತ್ತಿ ಕುಟುಂಬವನ್ನ ಜಾರಕಿಹೊಳಿ ಸಹೋಧರರು ಹಾಗೂ ಜೊಲ್ಲೆ ಸೇರಿ ಅತಂತ್ರ ಸ್ಥಿತಿಗೆ ತಲುಪಿಸಿದ್ದು ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎನ್ನುವದನ್ನ ಕಾಯ್ದು ನೋಡಬೇಕಿದೆ.